ನಮಸ್ಕಾರ ರೈತ ಭಾಂದವರೇ, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಮಯದಲ್ಲಿ ರೈತರು ಬೆಳೆಗಳಿಗೆ ಪೋಷಕಾಂಶ ಒದಗಿಸುವ ಕೆಲಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗೂ ರೈತರಿಗೆ ಸಾವಯವ ಗೊಬ್ಬರ ಸಮರ್ಪಕವಾಗಿ ಬಳಸಲು ಆಗುತ್ತಿಲ್ಲ, ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ.
ರಾಸಾಯನಿಕ ಗೊಬ್ಬರ ಹೆಚ್ಚಿಗೆ ಬಳಸುವುದರಿಂದ ಭೂಮಿ ಹಾಳಾಗುತ್ತದೆ. ಅದಕ್ಕಾಗಿ ಭೂಮಿ ಫಲವತ್ತತೆ ಹಾಗೂ ಬೆಳೆ ಅಭಿವೃದ್ಧಿ ಪಡಿಸಲು ಸಾವಯವ ರೂಪದ ಗೊಬ್ಬರ ಕೊಡುವುದು ಬಹಳ ಸೂಕ್ತವಾಗಿದೆ. ಅದಕ್ಕಾಗಿ ಎರೆಗೊಬ್ಬರ, ಎರೆಜಲ, ಹಸಿರೆಲೆ ಗೊಬ್ಬರ ಹೀಗೆ ಹಲವಾರು ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸುವುದರಿಂದ ರೈತರಿಗೆ ಭೂಮಿ ಫಲವತ್ತತೆ ಹಾಗೂ ಹೆಚ್ಚಿನ ಆದಾಯ ಪಡೆಯಲು ಸಹಾಯವಾಗುತ್ತದೆ.
ಪ್ರತಿಯೊಬ್ಬ ರೈತ ಸಹಜ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಸಾವಯವ ಕೃಷಿಗೆ ಆದ್ಯತೆ ನೀಡಲು “ಎರೆಹುಳು ಕೃಷಿ” ಮಾಡಿದರೆ ಉತ್ತಮವಾದ ಮಾರ್ಗವಾಗುತ್ತದೆ. ಎರೆಹುಳುವನ್ನು ಜೈವಿಕ ನೇಗಿಲು, ರೈತನ ಮಿತ್ರ, ರೈತ ಬಂಧು ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ:ಎಲ್ಲಾ ಯೋಜನೆಗಳ ಹಣದ ಜಮಾ ವಿವರ ತಿಳಿಯುವುದು ಇನ್ನು ಭಾರಿ ಸುಲಭ!
ಎರೆಹುಳುವಿನ ಚಟುವಟಿಕೆ:
ಇವು ಬೆಳೆಯುತ್ತಾ ಸುಮಾರು 3 ರಿಂದ 10 ಸೆಂ.ಮೀ. ಉದ್ದ, 0.4 ರಿಂದ 0.6 ಗ್ರಾಂ ತೂಕವಾಗುತ್ತವೆ. 50 ರಿಂದ 60 ದಿನಗಳಲ್ಲಿ ಕಡುಗೆಂಪು ಬಣ್ಣದ ವಯಸ್ಕ ಹುಳುವಾಗುತ್ತವೆ. ಈ ಹುಳುಗಳು 3 ರಿಂದ 6 ತಿಂಗಳ ಅವಧಿಯಲ್ಲಿ ಸುಮಾರು 100 ಮೊಟ್ಟೆಗಳಿರುವ ಕೋಶಗಳನ್ನಿಟ್ಟು ಅದರಿಂದ 300 ರಿಂದ 700 ಮರಿಗಳನ್ನು ಪಡೆಯುತ್ತವೆ. ಒಂದು ಸಾವಿರ ಹುಳುಗಳಿದ್ದರೆ ಒಂದು ತಿಂಗಳ ಸಂತಾನಾಭಿವೃದ್ಧಿಯಲ್ಲಿ 2.5 ಲಕ್ಷದಿಂದ 3 ಲಕ್ಷದಷ್ಟು ಹೆಚ್ಚಬಲ್ಲವು. ಇವು 2 ರಿಂದ 3 ವರ್ಷ ಬದುಕಿರಬಲ್ಲವು.
ಎರೆ ಹುಳುಗಳ ಬಳಕೆಯಿಂದಾಗಿ ಆಗುವ ಲಾಭಗಳು –
1. ಭೂಮಿಯ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ 10 ಪಟ್ಟು ಹೆಚ್ಚಾಗುತ್ತದೆ.
2. ಬೆಳೆಗೆ ಅತ್ಯವಶ್ಯಕವಾಗಿ ಬೇಕಾಗುವ ಪೋಷಕಾಂಶಗಳು ಕರಗಿ ಅಂತರ್ಜಲಕ್ಕೆ ಸೇರಿ, ಸೋರಿ ಹೋಗದಂತೆ ತಡೆಯುತ್ತದೆ.
3. ಎರೆಗೊಬ್ಬರ ಬಳಸಿದರೆ ಬೆಳೆಗೆ ಕೀಟ ರೋಗದ ಬಾಧೆ ಕಡಿಮೆ.
4. ಅದಕ್ಕಿಂತ ಮಿಗಿಲಾಗಿ ಫಸಲಿನ ಆರೋಗ್ಯ ಹೆಚ್ಚು ಉತ್ತಮವಾಗಿದ್ದು ನೀರು ಗಾಳಿ ಆಹಾರಗಳಲ್ಲಿ ವಿಷ ಬೆರಿಕೆ ಕಡಿಮೆಯಾಗುತ್ತದೆ.
5)ಪ್ರತಿ ಕ್ವಿಂಟಲ್ ಎರೆಗೊಬ್ಬರ ಸುಮಾರು 800 ಗ್ರಾಂ ಸಾರಜನಕ, 1100 ಗ್ರಾಂ ರಂಜಕ ಮತ್ತು 500 ಗ್ರಾಂ ಪೊಟ್ಯಾಶನ್ನು ಹೊಂದಿರುವದಾಗಿ ಸಂಶೋಧನೆಯಿಂದ ತಿಳಿದು ಬಂದಿದೆ.
6)ಎರೆಗೊಬ್ಬರವನ್ನು ಸಗಣಿಗೊಬ್ಬರಕ್ಕೆ ಹೋಲಿಸಿದರೆ, ಎರೆಗೊಬ್ಬರ ಸಗಣಿಗೊಬ್ಬರಕ್ಕಿಂತ ಎರಡು ಪಟ್ಟು ಸಾರಜನಕ ಐದು ಪಟ್ಟು ಹೆಚ್ಚು ರಂಜಕ ಹಾಗೂ ಐದು ಪಟ್ಟು ಹೆಚ್ಚು ಪೋಟ್ಯಾಷ್ ಅನ್ನು ಹೊಂದಿರುತ್ತದೆ.
7)ಎರೆಹುಳ ಗೊಬ್ಬರವನ್ನು ರಾಸಾಯನಿಕ ಗೊಬ್ಬರದೊಡನೆ ಹೋಲಿಸಿದಾಗ ಒಂದು ಕ್ವಿಂಟಲ್ ಎರೆಹುಳ ಗೊಬ್ಬರ ಕೊಟ್ಟರೆ ಸುಮಾರು ಎರಡು ಕಿ.ಗ್ರಾಂ ಯೂರಿಯಾ, ಏಳು ಕಿ.ಗ್ರಾಂ ರಂಜಕ, ಒಂದು ಕಿ.ಗ್ರಾಂ ಪೊಟ್ಯಾಷ್ ಕೊಟ್ಟಂತೆ ಬೆಳೆಗಳಿಗೆ.
ಎರೆಹುಳು ಗೊಬ್ಬರದ ಮಹತ್ವ: ಎರೆಹುಳು ಸಾವಯವ ವಸ್ತುಗಳಾದ ಕೃಷಿ ತ್ಯಾಜ್ಯ ವಸ್ತುಗಳನ್ನು ತನ್ನ ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನೊಳಗೊಂಡ ಹಿಕ್ಕೆಗಳನ್ನು ಹಾಕುತ್ತದೆ. ಎರೆಗೊಬ್ಬರವನ್ನು ಎಕರೆಗೆ 1 ಟನ್ನಂತೆ ಬಳಸಿ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು. ಎರೆಹುಳುವಿನ ಅನ್ನನಾಳದಲ್ಲಿ ಅಧಿಕ ಸಂಖ್ಯೆಯಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿ ಹೊಂದಿ ಹುಳುವಿನ ಅಭಿವೃದ್ಧಿ ಆಗಬೇಕು.
ಎರೆಜಲ ಎಂದರೇನು? ಎರೆಜಲ ಪಡೆಯುವ ವಿಧಾನ ಹೇಗೆ?
• ಒಂದು ದೊಡ್ಡ ಪಾತ್ರೆಯಲ್ಲಿ (500ಲೀ. ನೀರಿನ ಬ್ಯಾರಲ್ / ಡ್ರಮ್) ಒಂದು ಸಣ್ಣ ಪಾತ್ರೆಯನ್ನು (20 ಲೀಟರ್ ನೀರು ಹಿಡಿಯುವ ಬಕೆಟ್) ತಲೆ ಕೆಳಗಾಗಿ ಇಡಬೇಕು. ಬ್ಯಾರಲ್ನಲ್ಲಿ ತಳಭಾಗದಿಂದ ಸುಮಾರು 25ಸೆಂ.ಮೀ. ಎತ್ತರದವರೆಗೆ ಇಟ್ಟಿಗೆ ತುಂಡು / ಉಸುಕಿನ ಪದರ / ಖಡಿ, ಜೆಲ್ಲೆಯನ್ನು ತುಂಬಬೇಕು.
• ಸಣ್ಣ ಪಾತ್ರೆಯಲ್ಲಿ ಸಂಗ್ರಹವಾದ ಎರೆ ಜಲವನ್ನು ಪಡೆಯಲು ಅದಕ್ಕೆ 10 -25ಸಂ.ಮೀ. ಅಳತೆಯ ಪ್ಲಾಸ್ಟಿಕ್ ಪೈಪನ್ನು ಬ್ಯಾರಲನ ಹೊರಗಡೆ ಬರುವಂತೆ ಜೋಡಿಸಬೇಕು.
• ನಂತರ ಚೆನ್ನಾಗಿ ಕಳಿತ ಸಾವಯವ ವಸ್ತುಗಳನ್ನು ದೊಡ್ಡ ಪಾತ್ರೆಯಲ್ಲಿ ಉಸುಕಿನ ಪದರ/ ಖಡಿ, ಮೇಲೆ ತುಂಬ ಪ್ರತಿ 100ಕಿ.ಗ್ರಾಂ ಸಾವಯವ ವಸ್ತುಗಳಗೆ 5ಕಿ.ಗ್ರಾಂ ಎರೆ ಹುಳುಗಳನ್ನು ಬಿಡಬೇಕು.
• ನಂತರ 5ಲೀಟರನಂತೆ ನೀರನ್ನು 50 ದಿನಗಳವರೆಗೆ ಹಾಕಬೇಕು.
• ಈ ನೀಲಿನಿಂದ ಎರೆಹುಳು ಮತ್ತು ಎರೆಗೊಬ್ಬರವನ್ನು ತೊಳೆದು ಬಸಿದು ಸಣ್ಣ ಪಾತ್ರೆಯಲ್ಲಿ ಸಂಗ್ರಹವಾಗುತ್ತದೆ.
• ಕೊನೆಗೆ ಬರುವ ಸಾವಯವ ಹಾಗೂ ಎರೆಹುಳು ಕಳಚುವ ದ್ರವರೂಪವೇ ಎರೆಜಲ.
ಇದನ್ನೂ ಓದಿ:ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ ಕೃಷಿ ಇಲಾಖೆ!
ಎರೆಜಲದಲ್ಲಿರುವ ಪೋಷಕಾಂಶಗಳ ಪ್ರಮಾಣ –
ಸಾರಜನಕ – 0.17 %
ರಂಜಕ – 1.0-1.08 %
ಪೊಟ್ಯಾಶ್ – 1.19-1.45 %
ಮೆಗ್ನಿಸಿಯಂ – 10.0-13.0 ppm
ಕಬ್ಬಿಣ – 6.75-7.65 ppm
ಸತು – 22.4-36.30 ppm
ತಾಮ್ರ -ಅಲ್ಪ ಪ್ರಮಾಣ
ಎರೆಜಲದ ಉಪಯೋಗಗಳು –
• ಎರೆಜಲವನ್ನು ಬೆಳೆಗಳಿಗೆ ಸಿಂಪರಣೆ ಮಾಡಬಹುದು. (ನೀರಿನೊಡನೆ 2 -4ಮೀಲಿ ಪ್ರತಿ ಲೀಟರ್ ನೀರಿಗೆ) ಬೆರೆಸಿ ಸಿಂಪಡಿಸಬೇಕು.
• ಬೆಳೆಗಳಲ್ಲಿ ಉತ್ಪಾದನೆ, ಕೀಟನಿರೋಧಕ ಶಕ್ತಿ ಹೆಚ್ಚುವುದು ಕಂಡು ಬಂದಿರುವುದು.
• ಎರಜಲವನ್ನು ಎಲ್ಲ ಬೆಳೆಗಳಿಗೆ ಪ್ರಚೋದನಕಾರಿ ಉಪಯೋಗಿಸಬಹುದು.
• ಬೆಳೆಯವರ್ಧಕವಾಗಿ ಎಲ್ಲಾ ಬೆಳೆಗಳಲ್ಲಿ, ಬದನೆ ಈರುಳ್ಳಿ , ಸವತೆ, ಮೆಣಸಿನಕಾಯಿ ಮತ್ತು ಇತರ ತರಕಾರಿ ಬೆಳೆಗಳ ಮೇಲೆ ಬೆಳೆವರ್ಧಕವಾಗಿ ಉಪಯೋಗಿಸಬಹುದು.
• ದ್ರಾಕ್ಷಿ , ದಾಳಿಂಬೆ,ನಿಂಬೆ, ಬಾಳೆ ಮತ್ತು ಪಪಾಯದಲ್ಲಿ ಸಿಂಪರಣೆಯ ಮೂಲಕ ಎರೆಜಲವನ್ನು ಒದಗಿಸುವುದರಿಂದ ಅಥವಾ ಗಿಡದ ಬುಡಕ್ಕೆ ಹಾಕುವುದರಿಂದ ಗಿಡದ ಬೆಳವಣಿಗೆ ಮತ್ತು ಇಳುವರಿಯಲ್ಲಿ ಹೆಚ್ಚಾದದ್ದು ಕಂಡುಬರುತ್ತದೆ.
• ಗಿಡಗಳಲ್ಲಿ ಹೂ, ಕಾಯಿ ಉದುರುವುದು ಕಡಿಮೆಯಾಗುತ್ತದೆ.
• ಸಸ್ಯಗಳಿಗೆ ಬೇರು ಬೆಳೆಯಲು ಹಾಗೂ ನೀರು ಹಿಡಿಯುವ ಸಾಮರ್ಥ್ಯ ಹೆಚ್ಚಿಸುತ್ತದೆ.
ಸೂಚನೆ: ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ತೋಟಗಾರಿಕೆ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.